ವೈದ್ಯೋ ನಾರಾಯಣೋ ಹರಿಃ
ತೊಟ್ಟಿಲಿನ ಹಸುಗೂಸು
ತಾಯ ಅಮೃತಕ್ಕಾಗಿ ಕನವರಿಸಿ
ಕಾತರಿಸಿ ಕಾಯುತಿಹುದು ॥
ಆದರಾತಾಯಿ ಸಾಯುತಿಹ
ಜೀವಿಗಳಿಗೆ ಆರೈಕೆ
ಅಮೃತವ ನೀಡುತಿಹಳು ॥
ಮುಸ್ಸಂಜೆ ಹೊತ್ತಿನಲ್ಲಿ
ಪತಿಯ ನೆನಪಲ್ಲಿ ಮಡದಿ
ಹನಿಗಣ್ಣಾಗುತಿಹಳು ॥
ಆದರಾ ಪತಿಯಲ್ಲಿ
ಶ್ರೀಪತಿಯಾಗಿ ದುಃಖಿತರ
ಕಣ್ಣೀರ ಒರೆಸುತಿಹನು ॥
ತುಪ್ಪದ ದೀಪವಾ ಬೆಳಗಿ
ಮಗಳ ಕ್ಷೇಮಕ್ಕೆ ತಾಯಿ
ಬೇಡು ತಿಹಳು ॥
ಆದರಾ ಮಗಳಲ್ಲಿ ಜನರ
ಮನೆ ಮಗಳಾಗಿ ರೋಗಿಗಳ
ಶುಶ್ರೂಷೆ ಮಾಡುತಿಹಳು ॥
ಎಂದು ಬರುವನು ಮನೆಗೆ
ನನಕಂದ ಎನ್ನುತ್ತಾ ಬಾಗಿಲಲಿ
ತಂದೆ ಕಾಯುತಿಹನು ॥
ಆದರಾ ಕಂದನಲ್ಲಿ ಹಗಲಿರುಳು
ಬಿಡುವಿರದೆ ಅಸಹಾಯಕರ ಸೇವೆ
ಮಾಡುತಿಹನು
ನಗುಮೊಗದಿ ಧೃಡ ಚಿತ್ತದಿಂ
ಸೇವೆಗೈಯ್ಯುತಿಹ ನಿಮಗಿದೋ
ನಮ್ಮ ಸಾಷ್ಟಾಂಗ ನಮನ ॥
© Sagarika