...

3 views

ಸಾವಿರಾರು ವರ್ಷಗಳ ಏಕಾಂತ..
ಪಕ್ಕದಲ್ಲೊಂದು ಬ್ರಾಹ್ಮಣರ ಕೇರಿ ಅವರಿಗೂ ನಮಗೂ ಸಂಬಂಧವಿಲ್ಲ ಇದೋ ಇದು ತಿಗಳರ ಬೀದಿ ಇಲ್ಲಿ ಉದ್ದಕ್ಕೂ ಅವರೇ ಅವರಿಗೂ ನಮಗೂ ಸಂಬಂದವಿಲ್ಲ ಅತ್ತ ಗೌಗತ್ತಲು ಮುದ್ರೆ ಹೊಲ ಅಲ್ಲೊಂದು ಮಂಟಪ ಅಲ್ಲೈತೆ ಕಿವುಡಮ್ಮ ಮಗಳು ಪುಟ್ಟಮ್ಮ...ಅವರಿಗೂ ನಮಗೂ ಸಂಬಂಧವಿಲ್ಲ

ಅದೋ ಅಲ್ಲಿ ಕಣ್ಣಾಚೆಗೆ ಲಿಂಗಾಯತರಿದ್ದಾರೆ ಅವರಿಗೂ ನಮಗು ಸಂಬಂಧವಿಲ್ಲ ಇತ್ತ ಹಿಂದುಗಡೆ ಸಾಬರಿದ್ದಾರೆ ಅವರೋ ಹೊರಗಲವರು ಹೊರಚ್ಚಿಗಿದ್ದಾರೆ ಅಪರಿಚಿತರು ಅವರಿಗೂ ನಮಗೂ ಸಂಬಂಧವಿಲ್ಲ

ಊರಾಚೆಗದೋ ಅಲ್ಲಿ ಮಾದಿಗರ ಕೇರಿ ಇದೆ ಅಲ್ಲಿಯೂ ಅಷ್ಟೇ ಅಪರಿಚಿತರು ವಾಸ ಮಾಡುತ್ತಾರೆ ಅವರದೇ ಬಾವಿ ಅವರದೇ ನೀರು ಅವರದೊಂದು ಪ್ರತ್ಯೆಕ‌ ಲೋಕ ಅವರಿಗೂ ನಮಗೂ ಸಂಬಂದವಿಲ್ಲ

ಇಲ್ಲಿ ಒಳಾಯದೊಳಗೆ ಉಪ್ಪಾರರ ಬೀದಿ ಗಾಣಿಗರ ಬೀದಿ ಬಣಜಿಗರ ಬೀದಿ ಸದಾ ಮೌನವಾಗಿರುವುವು ಅವೆಲ್ಲ ಅಲ್ಲೆಲ್ಲ ನನ್ನ ಓಡಾಟ ಅಲೆದಾಟ ಅಲ್ಲಿಯೂ ಅಷ್ಟೇ ಅವರ್ಯಾರ ಜೊತೆಗೂ ನಮ್ಮ ಸಂಬಂದವಿಲ್ಲ

ಮೌನವಾಗಿ ತನ್ನ ಕ್ರೀಯಲ್ಲಿ ನಿರತನಾಗಿರುವ ಹಜಾಮರ ರಾಮಣ್ಣ ಅದ್ದಿ ತೆಗೆದಂತಿದ್ದಾನೆ ಮೌನದಲ್ಲಿ ಊರಿಗೆ ಬರುತ್ತಾನೆ ಊರಿಗೆ ಹೋಗುತ್ತಾನೆ ಬಿಟ್ಟ ಕಣ್ಣಾಗಿ ನೋಡುತ್ತಿದ್ದೇನೆ ಅವನನ್ನು ಅವನಿಗೂ ನಮಗೂ ಸಂಬಂದವಿಲ್ಲ

ಅಗಸರ ಹುಚ್ಚಣ್ಣ .ಗಂಗಣ್ಣ ಅಲ್ಲದೋ ಮಡಿವಾಳರ ಮನೆ ಅಲ್ಲೊಂದು ಇಲ್ಲೊಂದು ..ಬೆಸ್ತರ ಕೇರಿ ಮನೆ ಅಲ್ಲೊಂದು ಇಲ್ಲೊಂದು ನಾಯಕರ ಮನೆಯಲ್ಲೊಂದು ಇಲ್ಲೊಂದು ಯಾರೊಬ್ಬರಿಗೂ ಯಾರೊಂದಿಗೂ ಸಂಬಂದವಿಲ್ಲ

ಸಂಬಂದವಿಲ್ಲ ಕೊಟ್ಟು ತಂದು ಸಂಬಂದವಿಲ್ಲ‌ ಒಟ್ಟು ಗೂಡಿದರೂ ಸಂಬಂದವಿಲ್ಲ ಉಂಡು ಉಟ್ಟು ಸಂಬಂಧವಿಲ್ಲ ಹಗಲೂ ಏಕಾಂತ ರಾತ್ರಿಯೂ ಏಕಾಂತ ಹುಟ್ಟೂ ಏಕಾಂತ ಮದುವೆಯೂ ಏಕಾಂತ ಸಾವು ನೋವುಗಳಿಗೂ ಬಡಿದಿದೆ ಏಕಾಂತ

ಶಪಿತ ಭಾರತವೊಂದು ಏಕಾಂತಗಳ ಗ್ರಾಮ ಕೂಪಗಳ ಬೃಹತ್‌ ರೋಗಾಕ್ರಾಂತ ಏಕಾಂತ ಸಹಸ್ರ ಸಹಸ್ರ ಸಂವತ್ಸರಗಳ ಏಕಾಂತ ಭೇದಿಸಲಾಗದ ಏಕಾಂತ ಒಬ್ಬರಿಗೊಬ್ಬರು ಮಾತನಾಡದ ಏಕಾಂತ ಹತ್ತಿರ ಸೇರದ ಸಹಭಾಗಿಯಾಗದ ಪ್ರತ್ಯೇಕತಾ ಏಕಾಂತ

ಡಾ ಕೆ ಪಿ ನಟರಾಜ
೧೪. ೧. ೨೦೨೦
© prathima moha